Wednesday, February 18, 2009

ಹಳೇ ಬೇರು, ಹೊಸ ಚಿಗುರು...

ಹರಿದು ಚಿಂದಿಯಾಗಿ ಬಿದ್ದಿದ್ದ ರಸ್ತೆಗೇ ಆಸರೆಯೆಂಬಂತೆ ಏರು ಹಾದಿಯತ್ತ ಸಾಗಿತ್ತು ಪಯಣ. ಬಹುಶ: ಹತ್ತಿಪ್ಪತ್ತು ಹೆಜ್ಜೆ ಕ್ರಮಿಸಿದ್ದಷ್ಟೇ. ಕೆಳಹೊಟ್ಟೆಯ ಎಡಭಾಗ ಗಬಕ್ಕನೇ ಹಿಂಡಿದಂತಾಯ್ತು.. ಒಮ್ಮಿಂದೊಮ್ಮೆಗೆ ಲೋಕವೆಲ್ಲ ಕತ್ತಲು, ಸೆಟೆದು ನೇರವಾಗಿ ನಿಲ್ಲಲಾಗುತ್ತಿಲ್ಲ. ಬೆನ್ನುಮೊಳೆ ಬಾಗುತ್ತಿದ್ದಂತೆ ಕಾಲುಗಳು ಕುಸಿದವು. ಎಲ್ಲಿಂದಲೋ ಭರ್ರನೆ ಬಂದ ಬಿಳಿ ಕಾರು ಬಲ ತೋಳನ್ನು ತರಚಿಕೊಂಡೇ ತಗ್ಗಿನತ್ತ ಎಗ್ಗಿಲ್ಲದೆ ಸಾಗಿತು.. ‘ನೀರು ನೀರು’ ಎಂದವನ ಧ್ವನಿ ದಿಗಂತದಲ್ಲಿ ಲೀನ... ಕಣ್ಣಿಗೆ ಜೊಂಪು..

*******

ಧಿಗ್ಗನೆ ಎಚ್ಚರವಾಯ್ತು! ಕಣ್ಣು ಬಿಟ್ಟರೆ ಅನಂತ ನೀಲ ಆಗಸ.. ಬದಿಯಲ್ಲಿದ್ದ ಯಾರೋ ದೊಡ್ಡದಾಗಿ ಬಯ್ಯುತ್ತಿರುವುದು ಅಸ್ಪಷ್ಟವಾಗಿ ಕಿವಿಗೆ ಬಡಿಯುತ್ತಿದೆ... ಜನ ಕಣ್ಣಿಗೆ ಬಟ್ಟೆ ಕಟ್ಟಿದ ಇರುವೆಗಳಂತೆ ಬಿರಬಿರನೆ ಹೋಗುತ್ತಿದ್ದಾರೆ.. ಕಾರು, ಬೈಕು, ಲಾರಿ, ರಿಕ್ಷಾ ಅತ್ತಿಂದಿತ್ತ ಭುಸುಗುಡುತ್ತ ಸಾಗುತ್ತಿವೆ.. ರಸ್ತೆ ಬದಿಯ ಧೂಳಿನಲ್ಲಿ ಅಂಗಾತ ಬಿದ್ದಿದ್ದ ದೇಹ ಗಬಕ್ಕನೆ ಎದ್ದು ಕುಳಿತಿತು- ಅಖಂಡ ಲೋಕದಲ್ಲಿ ತಾನೊಬ್ಬನೇ ಭಿಕಾರಿ ಎಂಬಂತೆ...

ಮತ್ತೆ ನೋವು!

ಬರೋಬ್ಬರಿ ಆರು ದಿನಗಳ ಹಿಂದಿನವರೆಗೂ ಕಾಡದ ಹಸಿವೆಯ ನೋವು! ಸುತ್ತ ನೋಡಿದರೆ ಹಣ್ಣಿನಂಗಡಿ, ಐಷಾರಾಮಿ ಹೊಟೇಲು, ಚಾಕಲೇಟು ಡಬ್ಬಗಳು, ಸಿಹಿತಿಂಡಿ, ಆಮ್ಲೇಟು, ಪಾನಿಪೂರಿ! ಧೂಳೂ ಹಿಡಿದಿದ್ದ ಬಿಳಿ ಬಣ್ಣದ ಕಪ್ಪು ನೇರ ಗೆರೆಯ ಅಂಗಿ ಕಿಸೆಯನ್ನು ಬೆರಳುಗಳು ತಡಕಾಡಿದವು.. ಅಲ್ಲೇನಿದೆ ಮಣ್ಣು? ಕಿಸೆ ಬೆತ್ತಲಾಗಿ ನಗುತ್ತಿದೆ! ಸ್ಥಿಮಿತ ಕಳೆದುಕೊಂಡ ದೇಹ ಆದದ್ದಾಗಲಿ ಎಂದು ಎದುರಿದ್ದ ಹೊಟೇಲಿಗೆ ನುಗ್ಗಿತು. ಇನ್ನೇನು ಲೋಟ ಎತ್ತಿ ನೀರು ಕುಡೀಬೇಕು ಎನ್ನುವಷ್ಟರಲ್ಲಿ ದಪ್ಪ ಮೀಸೆಯ ದಡೂತಿ ಆಸಾಮಿ ನಡಿ ಹೊರಗೆ ಎಂದುಬಿಟ್ಟ!

********

ತಣ್ಣನೆಯ ಗಾಳಿಗೆ ಮೇಫ್ಲವರ್ ಮರದ ಎಲೆಗಳು ತಲೆದೂಗುತ್ತಿವೆ... ಮರದ ಕಟ್ಟೆ ಮೇಲೆ ಪವಡಿಸಿದ್ದೇ ಬೆನ್ನಿಗಂಟಿದ್ದ ಹೊಟ್ಟೆ, ಪಾತಾಳಕ್ಕಿಳಿದಿದ್ದ ಹಸಿವು ಮಿಂಚಿನಂತೆ ಮರೆಯಾಗಿ ಮನಸ್ಸು ಆಸ್ಫೋಟಿಸಿತು... ಜಗತ್ತಿಗೇ ಧಿಕ್ಕಾರ ಕೂಗಿತು!

*******

ಅದೇ ಬೀದಿಯಲ್ಲಿ ದಾಪುಗಾಲಿಡುತ್ತ ಸಾಗಿದ ಬದುಕಿನ ಚಿಂದಿ ಚಿಂದಿ ಸಾಲುಗಳೀಗ ಸುಂದರ ಕವನವಾಗಿದೆ. ಅರೆರೇ! ಅಗೋ... ಮತ್ತದೇ ಬೀದಿಯಲ್ಲಿ ಯಾರೋ ನರಳುತ್ತಿರುವ ಸದ್ದು ಕೇಳಿಸುತ್ತಿದೆ! ಹಸಿವಿನ ಆಕ್ರಂದನ... ಅದೆಷ್ಟೋ ವರ್ಷಗಳ ಹಿಂದೆ ಅನುಭವಿಸಿದ ನೋವು ಈಗ ಮತ್ತಾರನ್ನೋ ಕಾಡುತ್ತಿದೆ! ಅದೇ ಜನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಹೋಗುತ್ತಿದ್ದಾರೆ.. ಸುತ್ತಲೂ ಅದೇ ಹಣ್ಣಿನಂಗಡಿ, ಐಷಾರಾಮಿ ಹೊಟೇಲು, ಚಾಕಲೇಟು ಡಬ್ಬಗಳು, ಸಿಹಿತಿಂಡಿ, ಆಮ್ಲೇಟು, ಪಾನಿಪೂರಿ! ಐಷಾರಾಮಿ ಹೊಟೇಲಿನ ಧಡೂತಿ ವ್ಯಕ್ತಿ ಬಾಗಿಲ ಬಳಿಯಲ್ಲೇ ನಿಂತಿದ್ದಾನೆ... ಸಣಕಲು ದೇಹ ಮಾತ್ರ ಅಂಗಾತ ಬಿದ್ದಿದೆ...

ಧಿಕ್ಕಾರ! ಮನುಷ್ಯನ ನಿರ್ದಯತೆಗೆ, ದರ್ಪಕ್ಕೆ, ಕ್ರೌರ್ಯಕ್ಕೆ, ಅಧಿಕಾರದ ಮದೋನ್ಮತ್ತತೆಗೆ, ಅಹಂಕಾರಕ್ಕೆ, ಬಂಡವಾಳಶಾಹಿತ್ವಕ್ಕೆ, ದೇಶದ ವ್ಯವಸ್ಥೆಗೆ, ಕೊನೆಗೆ ಅಸಹಾಯಕತೆಗೂ!

3 comments:

  1. ಮನುಷ್ಯನ ನಿರ್ದಯತೆಗೆ ಧಿಕ್ಕಾರ!

    ReplyDelete
  2. ಸಿದ್ಧಾಂತದ ಹಾದಿಯಲ್ಲಿ ನಿಮ್ಮ ಪಯಣ ಸುಖಕರವಾಗಿರಲಿ.
    -ಮಲ್ಲಿಕಾರ್ಜುನ ದೇಸಾಯಿ

    ReplyDelete
  3. siddanthada hadiyalli asiddanthada karinerlu beeladirali.....nimma prayatnakke nanna sneha poorvaka shubha haraike.....
    inthi nimmava.....
    vajrottama (soorya)

    ReplyDelete