Tuesday, July 14, 2009

ಧರ್ಮದ ಗೋಡೆ ಒಡೆದು "ದೇವರಿಲ್ಲ" ಎಂದು ಸಾರಿದ!

We should have religion but not God!

ಈ ಮಾತುಗಳನ್ನು ಈಗ ಹೇಳಿದರೆ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಕ್ಕಿಲ್ಲ. ಆದರೆ, ೧೯ನೇ ಶತಮಾನದ ಆರಂಭ ಕಾಲದಲ್ಲಿ, ಜಗತ್ತಿನಾದ್ಯಂತ ಜಾತಿ, ಧರ್ಮಗಳ ನಂಬಿಕೆ ಆಳವಾಗಿ ಜನರ ನಸ್ಸನ್ನು ಆವರಿಸಿದ್ದ ಕಾಲದಲ್ಲಿ ಇದೇ ಮಾತುಗಳು ಜನರ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು.

"ಸಾಂಪ್ರದಾಯಿಕ ಧರ್ಮಗಳು ಅರ್ಥಹೀನ ತತ್ವಗಳಿಂದ, ಮೂಢನಂಬಿಕೆ, ಕಂದಾಚಾರಗಳಿಂದ ತುಂಬಿದ್ದು ಸತ್ವಹೀನವಾಗಿವೆ. ಅವು ಪೋಷಿಸಿಕೊಂಡು ಬಂದ ಹಳೆಯ ದೇವರುಗಳು ತಮ್ಮ ಪೀಠದಿಂದ ಪದಚ್ಯುತರಾಗುತ್ತಾರೆ..."

ಇಂಥ ಮಾತುಗಳನ್ನು ಕೇಳಿ ಸಹಿಸುವುದೆಂತು? ಜನತೆ, ಪ್ರಕಾಂಡ ಪಂಡಿತರು, ಶ್ರೇಷ್ಠ ವಿಜ್ಞಾನಿಗಳ ನಂಬಿಕೆಯ ಭದ್ರ ಬುನಾದಿ ಅಲುಗಾಡಿದ್ದೇ ಆಗ. ಅರ್ಥಹೀನ ತತ್ವಗಳನ್ನು ಜನರ ಮನಸ್ಸಿನಲ್ಲಿ ತುಂಬಿ ಸಮಾಜ ಒಡೆಯುವ ಹುನ್ನಾರವಿದು ಎಂದರು.

ಆದರೆ ಅವನು ಮಾತ್ರ ಎದೆಗುಂದಲಿಲ್ಲ. ಯಾರ ಟೀಕೆಗಳಿಗೂ ಕಿವಿಯಾಗಲಿಲ್ಲ. ತನ್ನ ಸಿದ್ಧಾಂತಗಳನ್ನು ಛೇಡಿಸುವವರ ಬರಹಗಳಿಗೆ ಕಣ್ಣಾಗಲಿಲ್ಲ. ಅಸಹನೀಯ ಒಂಟಿತನವನ್ನೇ ಅನುಭವಿಸಿದವನಿಗೆ ಯಾರ ಹಂಗೂ ಬೇಕಿರಲಿಲ್ಲ. "ದೇವರು ಎಂಬಾತ ಮನುಷ್ಯನ ಅಜ್ಞಾನವನ್ನು ಆಶ್ರಯಿಸಿ ಜೀವಿಸಿದ್ದಾನೆ" ಎಂದು ಘಂಟಾಘೋಷವಾಗಿ ಸಾರಿ ಹೇಳಿದ. ಅಷ್ಟೆ ಅಲ್ಲ, ತನ್ನ ಸಿದ್ಧಾಂತಗಳನ್ನು ಕಾರ್ಯಗತಗೋಳಿಸಿಯೇಬಿಟ್ಟ, "Religion of humanity" ಎನ್ನುವ ಹೊಸ ಧರ್ಮದ ಹರಿಕಾರನಾದ...

ಅವನೇ ಆಗಸ್ಟ್ ಕೋಮ್ಟ್! ಫ್ರಾನ್ಸಿನ ಮಹಾನ್ ತತ್ವಜ್ಞಾನಿ, ಉದಾತ್ತ ಚಿಂತಕ, ಉತ್ಕೃಷ್ಟ ಬರಹಗಾರ, ಶ್ರೇಷ್ಠ ನೀತಿತತ್ವಜ್ಞ. ಬೌದ್ಧಿಕತೆ ಮತ್ತು ವೈಜ್ಞಾನಿಕತೆಗಳಿಗೆ ಆರಂಭದಿಂದಲೂ ಪ್ರಾಮುಖ್ಯತೆ ನೀಡುತ್ತ ಬಂದವನು. "The positive philosophy" ಎನ್ನುವ ಮಹೋನ್ನತ ಕೃತಿಯ ಕರ್ತೃ. ಸಮಾಜಶಾಸ್ತ್ರದ ಪಿತಾಮಹ.

ಹುಟ್ಟಿದ್ದು ೧೭೯೮ ಜನವರಿ ೧೭. ಸ್ಥಳ ಫ್ರಾನ್ಸಿನ ಮೌಂಟ್ ಪೆಲಿಯರ್. ತಂದೆ ಸರ್ಕಾರಿ ಅಧಿಕಾರಿ. ತಾಯಿ ಮಹಾನ್ ದೈವಭಕ್ತೆ. ಆರಂಭದಿಂದಲೂ ವಿಚಾರಶಕ್ತಿ, ಕ್ರಿಯಾಶೀಲತೆ ಪ್ರಕಟಪಡಿಸುತ್ತಲೇ ಬಂದ ಕೋಮ್ಟ್ ತನ್ನ ಹೆತ್ತವರ ಧರ್ಮನಿಷ್ಠೆ, ರಾಜನಿಷ್ಠೆಗೇ ವಿರುದ್ಧವಾಗಿ ನಿಂತ. ಪ್ರತಿಷ್ಠಿತ ಇಕೋಲ್ ಪಾಲಿಟೆಕ್ನಿಕ್ ನಲ್ಲಿ ಸೀಟು ಗಿಟ್ಟಿಸಿಕೊಂಡರೂ, ಅಲ್ಲಿನ ಪ್ರಾಧ್ಯಾಪಕರೊಬ್ಬರ ವಿರುದ್ಧವೇ ದಂಗೆ ಎದ್ದು, ಮುಷ್ಕರ ಹೂಡಿ ಶಾಲೆಯನ್ನೇ ಮುಚ್ಚುವ ಸ್ಥಿತಿಗೆ ತಂದಿಟ್ಟ. ಓದನ್ನೂ ಅಲ್ಲಿಗೇ ಅನಿವಾರ್ಯವಾಗಿ ಮುಗಿಸಬೇಕಾಯಿತು.

ಶಾಲೆ ಬಿಟ್ಟರೂ ಆಗಿನ ಪ್ರಸಿದ್ಧ ಸಮಾಜವಾದಿ ಚಿಂತಕ ಸೈಂಟ್ ಸೈಮನ್ನನ ಸಖ್ಯ ದೊರೆಯಿತು. ೧೬ನೇ ವಯಸ್ಸಿನಲ್ಲೇ ಸೈಮನ್ನನ ಕಾರ್ಯದರ್ಶಿಯಾಗಿ, ಸಹಚಿಂತಕನಾಗಿ ದುಡಿದ. ಇದು ಕೋಮ್ಟ್ ನಿಗೆ ಸ್ಫೂರ್ತಿಯಾಯಿತು. ಆದರೆ ಸೈಮನ್ನನ ಸಿದ್ಧಾಂತಗಳು ಕೋಮ್ಟ್ ನ ವಿಚಾರಗಳ ಮೇಲೆ ಬಲವಾದ ದಾಳಿ ನಡೆಸಿದ್ದರ ಫಲವಾಗಿ ಆತನಿಂದ ದೂರಾದ.

ಮದುವೆಯೂ ಆಯಿತು. ಕೆಲವು ವರ್ಷಗಳಲ್ಲಿ ಅದೂ ಮುರಿದುಬಿತ್ತು. ಕೊಟಿಲ್ದವಾ ಎಂಬಾಕೆಯ ಸ್ನೇಹ ಸಂಪಾದಿಸಿದರೂ ಅವಳೂ ಮರಣ ಹೊಂದಿದಳು. ಕೋಮ್ಟ್ ಭಯಂಕರ ಓಂಟಿತನಕ್ಕೆ ತುತ್ತಾದ. ಆ ಏಕಾಂತದಲ್ಲಿ ಹುಟ್ಟಿದ್ದು ಪ್ರಪಂಚವನ್ನೇ ಬದಲಿಸುವ ಶಕ್ತಿಯುಳ್ಳ ಚಿಂತನೆಗಳ ಮಹಾಪೂರ! ತನ್ನ ಸಿದ್ಧಾಂತಗಳಿಗೆ ವೇದಿಕೆಗಳನ್ನು ವಿಸ್ತರಿಸುತ್ತಲೇ ಹೋದ ಕೋಮ್ಟ್ ಆರ್ಥಿಕ, ದೈಹಿಕ, ವೈಯಕ್ತಿಕ ಅಧ:ಪತನದ ಪಾತಾಳಕ್ಕಿಳಿದರೂ ಮಾವವತೆಯ ದೀವಟಿಗೆಯನ್ನು ಪ್ರಕ್ಷುಬ್ಧ ಸಮಾಜದ ಮೇಲೆ ಎತ್ತಿ ಹಿಡಿದು ಸಾಗಿದ... ಕೋಮ್ಟ್ ಅಮರನಾದ!
.......... ಇನ್ನೂ ಇದೆ (ಮುಂದಿನ ಕಂತು- ಕೋಮ್ಟ್ ನ ಸಿದ್ಧಾಂತ)

4 comments:

  1. ಒಂದಿಷ್ಟು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  2. olleya baraha haagu barahada vishaya.dhanyavaadagalu.

    ReplyDelete
  3. ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ.

    ReplyDelete
  4. ಮಾಹಿತಿ ನೀಡಿದ್ದಕ್ಕೆ ಧಾನ್ಯವಾದಗಳು

    ReplyDelete